ಕಾರ್ಕಳ: ರಸ್ತೆ ವಿಚಾರವಾಗಿ ವ್ಯಕ್ತಿಯೋರ್ವರಿಗೆ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನ; ದೂರು ದಾಖಲು..!

ಕಾರ್ಕಳ: ತಾಲೂಕಿನ ಕಲ್ಯಾ ಗ್ರಾಮದಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಕಾರ್ಕಳದ ಕಲ್ಯಾ ಗ್ರಾಮದ ದಿನೇಶ ಎಂಬವರು ಪೊಲೀಸರಿಗೆ ದೂರು ನಿಡಿದ್ದು, ಅದರಂತೆ ಇವರಿಗೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಸ.ನಂ 159/1 ರಲ್ಲಿ 0.38 ಎಕ್ರೆ ಸ್ಥಿರಾಸ್ತಿ ಸರಕಾರದಿಂದ ಮಂಜೂರಾಗಿದ್ದು ಆದರಲ್ಲಿ ಮನೆಕಟ್ಟಿ ಕೃಷಿ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಈ ಸ್ಥಿರಾಸ್ತಿಗೆ ಮತ್ತು ಇತರರ ಸ್ಥಿರಾಸ್ತಿಗಳಿಗೆ ಬಂಡಸಾಲೆ -ಅರ್ಬಿ-ಪಾರಬೆಟ್ಟು ಪಂಚಾಯತ್ ರಸ್ತೆಯಿಂದ ಸ.ನಂಬ್ರ 286/5ರ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆ ಹಲವಾರು ವರ್ಷಗಳಿಂದ ಊರ್ಜಿತ ಇದ್ದು ಸ.ನಂ, 286/5ರ ಪಹಣಿಯ ಕಾಲಂ ನಂಬ್ರ 11 ರಲ್ಲಿ ಕೂಡ ದಾರಿ ಹಕ್ಕು ನಮೂದಾಗಿರುತ್ತದೆ.

ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಬಂಡಸಾಲೆ-ಅರ್ಬಿ- ಪಾರಬೆಟ್ಟು ಪಂಚಾಯತ್ ರಸ್ತೆಯನ್ನು ಆರೋಪಿಯಗಳು ಇತ್ತೀಚಿಗೆ ಜೆಸಿಬಿ ಯಂತ್ರದ ಮೂಲಕ ಅಗೆದು ಹಾಕಿ ರಸ್ತೆಗೆ ಅಡ್ಡಲಾಗಿ ಮರಗಳನ್ನು ಕಡಿದು ಹಾಕಿದ್ದು ಇದರಿಂದ ವಾಹನ ಸಂಚಾರಕ್ಕೆ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಓಡಾಡಲು ಅಸಾದ್ಯವಾಗಿದೆ. ಅಲ್ಲದೆ ಆಸುಪಾಸಿನ ಮನೆಗಳಿಗೂ ಗ್ರಾಮ ಪಂಚಾಯತಿಯಿಂದ ಒದಗಿಸಿದ ನಳ್ಳಿ ನೀರಿನ ಸಂರ್ಪಕದ ಪೈಪ್ ಲೈನ್ ಅನ್ನು ತುಂಡರಿಸಿ ತೊಂದರೆ ನೀಡಿದ್ದಾರೆ. ಮಾತ್ರವಲ್ಲದೆ ಮಾ.5 ರಂದು ಬೆಳಿಗ್ಗೆ ದಿನೇಶ ಅವರು ಈ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಆರೋಪಿಗಳು ಸಾರ್ವಜನಿಕ ರಸ್ತೆಯಲ್ಲಿ ನಿಂತು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಲು ಯತ್ನಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top