ಬೆಂಗಳೂರು : ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರವರು ಬೆಂಗಳೂರಿನಲ್ಲಿ ಭೇಟಿಯಾಗಿ ಜಿಲ್ಲೆಯ ಅಸಂಘಟಿತ ಕಾರ್ಮಿಕರಾದ ಚಿನ್ನ, ಬೆಳ್ಳಿ ಕುಶಲಕರ್ಮಿಗಳು, ವಿಶ್ವಕರ್ಮ ಸಮುದಾಯದ ಬಡಗಿ, ಕಮ್ಮಾರ ವೃತ್ತಿ, ಟೈಲರ್,ಆಟೋ ಚಾಲಕರು, ಮೀನುಗಾರಿಕಾ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
![](https://i0.wp.com/www.baravanige.com/wp-content/uploads/2023/11/IMG-20231106-WA0025-optimized.jpg?resize=436%2C704&ssl=1)
ಇತ್ತೀಚಿನ ದಿನಗಳಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಬಂಡವಾಳಶಾಹಿ ಕಾರ್ಪೊರೇಟ್ ವ್ಯವಸ್ಥೆಯ ಚಿನ್ನಾಭರಣ ಸಂಸ್ಥೆಗಳು ಹೊರ ರಾಜ್ಯದ ಕಾರ್ಮಿಕರಿಂದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಜಿಲ್ಲೆಯ ಸ್ಥಳೀಯ ಕುಶಲಕರ್ಮಿಗಳಿಗೆ ಅವಕಾಶ ನೀಡದೆ ಸಂಕಷ್ಟ ಎದುರಿಸುವಂತಾಗಿದೆ.
ಅಸಂಘಟಿತ ಕಾರ್ಮಿಕರು ಸರಕಾರದಿಂದ ನೀಡುವ ಸೌಲಭ್ಯದಿಂದ ವಂಚಿತರಾಗಿದ್ದು, ಆರೋಗ್ಯ ವಿಮೆ, ಮಕ್ಕಳ ವಿದ್ಯಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ಕಡಿಮೆ ಬಡ್ಡಿದರದಲ್ಲಿ ಸಾಲ ಯೋಜನೆ, ಇ ಎಸ್ ಐ ಸೌಲಭ್ಯ, ಕೌಶಲ್ಯ ತರಬೇತಿ ಕಾರ್ಯಕ್ರಮಗಳು, ಪಿಂಚಣಿ ಯೋಜನೆಗಳ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಶೀಘ್ರದಲ್ಲಿಯೇ ಚಿನ್ನ ಬೆಳ್ಳಿ ಕುಶಲಕರ್ಮಿಗಳು, ವಿಶ್ವಕರ್ಮ ಸಮುದಾಯ ಹಾಗೂ ಟೈಲರ್ ಅಸೋಸಿಯೇಶನ್, ಆಟೋ ಚಾಲಕರ ಸಂಘ, ಮೀನುಗಾರಿಕಾ ಕಾರ್ಮಿಕರ ನಿಯೋಗದೊಂದಿಗೆ ವಿವಿಧ ಬೇಡಿಕೆಗಳ ಬಗ್ಗೆ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಅವಕಾಶ ನೀಡುವಂತೆ ಕೋರಿದರು.