ಉಡುಪಿ: ಮತ್ತೊಂದು ವಂಚನೆ ಪ್ರಕರಣ: ತನಿಖೆಗಾಗಿ ಚೈತ್ರಾಳನ್ನು ಬ್ರಹ್ಮಾವರಕ್ಕೆ ಕರೆತಂದ ಪೊಲೀಸರು

ಉಡುಪಿ, ಅ. 31: ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ವಂಚನೆ ಆರೋಪಿಯಾಗಿರುವ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಕುಂದಾಪುರ ಮೂಲದ ಚೈತ್ರಾಳನ್ನು ಮತ್ತೊಂದು ವಂಚನೆ ಪ್ರಕರಣದ ತನಿಖೆಗಾಗಿ ಬ್ರಹ್ಮಾವರ ಠಾಣೆಗೆ ಕರೆ ತರಲಾಗಿದೆ.

ಬಟ್ಟೆ ಅಂಗಡಿಯನ್ನು ತೆರೆದುಕೊಂಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಸುಧೀನ್ ಚೈತ್ರಾ ವಿರುದ್ದ ದೂರು ನೀಡಿದ್ದರು.

ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ಸುಧೀನ್ ನಂಬಿಸಿದ್ದ ಚೈತ್ರಾ, 2018-2023 ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದು, ಮೂರು ಲಕ್ಷವನ್ನ ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುಧೀನ್ , ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿರುವುದಾಗಿ ದೂರು ದಾಖಲಿಸಿದ್ದರು.

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ 5 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಬ್ರಹ್ಮಾವರ ಠಾಣೆ ಪೊಲೀಸರು ಇಂದು ಸಂಜೆ ಚೈತ್ರಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.

You cannot copy content from Baravanige News

Scroll to Top