Saturday, July 27, 2024
Homeಸುದ್ದಿರಾಷ್ಟ್ರೀಯಮದುವೆ ಆಗಲ್ಲ ಎಂದ ಯುವಕ.. ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ ಯುವತಿ!

ಮದುವೆ ಆಗಲ್ಲ ಎಂದ ಯುವಕ.. ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ ಯುವತಿ!

ರಾಂಚಿ : ಪ್ರೀತಿ ಮಾಡುವಾಗ ಎಲ್ಲವೂ ಸುಗಮವಾಗಿಯೇ ಇರುತ್ತದೆ. ಮದುವೆ ಆಗಬೇಕು ಅನ್ನೋ ವಿಚಾರ ಬಂದಾಗಲೇ ಪ್ರೀತಿಯ ಅಸಲಿ ಕಹಾನಿ ಶುರುವಾಗೋದು. ಎರಡು ಮನಸ್ಸುಗಳ ಸಮ್ಮಿಲನ ಮದುವೆ ಹಂತಕ್ಕೂ ಕರೆದುಕೊಂಡು ಹೋಗಬಹುದು, ಇಲ್ಲವೇ ಬ್ರೇಕಪ್ ಕೂಡ ಮಾಡಿಸಬಹುದು. ಅದಕ್ಕೆ ಕಾರಣಗಳು ಹಲವು.

ಹೀಗೆ ಒಂದು ಜೋಡಿ ಹಲವು ವರ್ಷಗಳಿಂದ ಪ್ರೀತಿಯಲ್ಲಿ ತೇಲಾಡುತ್ತಿತ್ತು. ಯುವತಿಯಂತೂ ತಾನು ಪ್ರೀತಿಸಿ ಹುಡುಗನನ್ನು ಮದುವೆಯಾಗಿ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಬೇಕು ಎಂಬ ಕನಸು ಕಟ್ಟಿಕೊಂಡಿದ್ದಳು. ಯಾವಾಗ ಹುಡುಗ ಆಕೆಯನ್ನು ಮದುವೆ ಆಗಲ್ಲ ಅಂದು ಹೇಳಿದನೋ ಅಲ್ಲಿಂದಲೇ ಶುರುವಾಯ್ತು ನೋಡಿ ಜಿದ್ದು. ಇಷ್ಟು ದಿನ ಪ್ರೀತಿ ಹೆಸರಲ್ಲಿ ಮಜಾ ಮಾಡಿ ಈಗ ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ ಹುಡುಗಿ ಆತನನ್ನೇ ಕೊಲ್ಲಲು ಪ್ಲಾನ್ ಮಾಡೇಬಿಟ್ಟಳು. ಪ್ರೀತಿ ಎಷ್ಟರಲ್ಲಿ ಇರಬೇಕು ಅಷ್ಟರಲ್ಲಿ ಇದ್ದಿದ್ರೆ ಈ ಕೊಲೆ ಆಗುತ್ತಿರಲಿಲ್ಲ. ಈಕೆ ಆತನನ್ನು ಹುಚ್ಚಾಗಿ ಪ್ರೀತಿಸಿದ್ದೇ ಒಂದು ಕೊಲೆ ಮಾಡಲು ಕಾರಣವಾಗಿದ್ದು. ಇಲ್ಲಿ ಇಬ್ಬರದ್ದು ತಪ್ಪು ಎಂದರೆ ಅತಿಶಯೋಕ್ತಿ ಆಗಲಾರದು.

ಹೌದು, ಮದುವೆ ಆಗಲ್ಲ ಎಂದಿದ್ದಕ್ಕೆ ಪ್ರೇಮಿಯನ್ನೇ ಪ್ರೇಯಸಿಯೋರ್ವಳು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ಪಾಲಾಮು ಜಿಲ್ಲೆಯ ಕಲ್ಹು ಗ್ರಾಮದಲ್ಲಿ ನಡೆದಿದೆ.

ಧರ್ಮೆನ್ ಓರಾನ್ ಹತ್ಯೆಯಾಗಿರುವ ಯುವಕ. ಅಂಜಲಿ ಕುಮಾರಿ (20) ಕೃತ್ಯ ಎಸೆಗಿದ ಯುವತಿ.

ಈ ಇಬ್ಬರು ಮೊದಲಿನಿಂದಲೂ ಪ್ರೀತಿ ಮಾಡುತ್ತಿದ್ದರು. ಹೀಗಾಗಿ ಮದುವೆ ಮಾಡಿಕೊಳ್ಳುವಂತೆ ಪ್ರಿಯಕರನನ್ನು ಯುವತಿ ಸಾಕಷ್ಟು ಬಾರಿ ಕೇಳಿಕೊಂಡಿದ್ದಳು. ಆದರೆ, ಆತ ಪ್ರತಿ ಬಾರಿ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ ನಿರಾಕರಿಸುತ್ತಿದ್ದ. ಒಂದು ದಿನ ಈ ವಿಚಾರಕ್ಕೆ ಬೇಸತ್ತ ಯುವತಿ ಮಾಸ್ಟರ್ ಪ್ಲಾನ್ ಮಾಡಿದ್ದಳು.

ಪ್ಲಾನ್ ಪ್ರಕಾರ ಗ್ರಾಮದ ಹೊರಗಿನ ಯಾರು ಸುಳಿಯದ ಪೊದೆಯೊಂದರ ಬಳಿ ಬರುವಂತೆ ಯುವಕನಿಗೆ ಹೇಳಿದ್ದಳು. ಅದರಂತೆ ಇಬ್ಬರು ಆ ಸ್ಥಳಕ್ಕೆ ಬಂದು ಕೆಲ ಸಮಯ ಏಕಾಂತವಾಗಿ ಕಳೆದರು. ಬಳಿಕ ಆಕೆಯ ತೊಡೆ ಮೇಲೆ ಯುವಕ ಮಾತನಾಡುತ್ತ ನಿದ್ದೆಗೆ ಜಾರಿದ್ದ. ಇದಕ್ಕಾಗಿ ಕಾಯುತ್ತಿದ್ದ ಯುವತಿ ಆತನನ್ನು ಮಲ್ಲಗೆ ನೆಲದ ಮೇಲೆ ಮಲಗಿಸಿದಳು. ಬಳಿಕ ತಕ್ಷಣ ತಾನು ಮೊದಲೇ ತಂದು ಬಚ್ಚಿಟ್ಟಿದ್ದ ಕೊಡಲಿಯನ್ನು ತೆಗೆದು ಕೊಚ್ಚಿ ಕೊಂದಿದ್ದಾಳೆ. ನಂತರ ಶವವನ್ನು ಅಲ್ಲೇ ಪೊದೆಯಲ್ಲೇ ಬಚ್ಚಿಟ್ಟು ಯಾರಿಗೂ ಅನುಮಾನ ಬಾರದಂತೆ ಗ್ರಾಮಕ್ಕೆ ಹೋಗಿದ್ದಾಳೆ. ಆದ್ರೆ ಗ್ರಾಮಸ್ಥರು ಯುವಕನ ಶವವನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಅಂಜಲಿ ಕುಮಾರಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಲಾಗಿರುವ ಕೊಡಲಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಆಕೆಯ ರಕ್ತದ ಕಲೆಯುಳ್ಳ ಸಲ್ವಾರ್-ಕಮೀಜ್ ಸಾಕ್ಷಿಗಳಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಉಪ ವಿಭಾಗದ ಪೊಲೀಸ್ ಅಧಿಕಾರಿ ಸುರ್ಜೀತ್ ಕುಮಾರ್ ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News