ಬಿಗ್ ಬಾಸ್ ಮನೆಯಿಂದ ನಿನ್ನೆಯಷ್ಟೇ ಅರೆಸ್ಟ್ ಆಗಿರುವ ಸ್ಪರ್ಧಿ ವರ್ತೂರ ಸಂತೋಷಷ್ ಅವರನ್ನು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನಲ್ಲಿರುವ ಹುಲಿ ಉಗುರು ಬಂದಿದ್ದು ಹೇಗೆ? ಯಾರು ಕೊಟ್ಟರು? ಎಲ್ಲಿಂದ ಖರೀದಿ ಮಾಡಿದಿದ್ದೀರಿ? ಮಾರಿದವರು ಈಗ ಎಲ್ಲಿದ್ದಾರೆ? ಎಷ್ಟು ಮಂದಿಗೆ ಈ ರೀತಿ ಉಗುರು ಮಾರಲಾಗಿದೆ ಹೀಗೆ ಇತ್ಯಾದಿ ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳು ಸಂತೋಷ್ ಮುಂದೆ ಇಟ್ಟಿದ್ದಾರೆ. ಅದಕ್ಕೆ ಸಂತೋಷ್ ಕೂಡ ಉತ್ತರ ನೀಡಿದ್ದಾನೆ ಎನ್ನುವ ಮಾಹಿತಿ ಇದೆ.
ಅಪರಿಚತರು ಹುಲಿ ಉಗುರನ್ನು ಮಾರಕ್ಕೆ ತಂದಿದ್ದರು. ಅವರು ಎಲ್ಲಿಂದ ಬಂದಿದ್ದರು, ಯಾರು ಎನ್ನುವುದು ನನಗೆ ಗೊತ್ತಿಲ್ಲ. ಮಾರಾಟ ಮಾಡುತ್ತಿರುವ ವಿಷಯ ಗೆಳೆಯರಿಂದ ತಿಳಿಯಿತು. ಹಣ ಕೊಟ್ಟು ಇದನ್ನು ಖರೀದಿ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಸಂತೋಷ್ ಹೇಳಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ.
ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಅವರು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿ, ಸದ್ಯ ಅರಣ್ಯಾಧಿಕಾರಿಗಳಿಂದ ಸಂತೋಷ್ ಅವರ ವಿಚಾರಣೆ ನಡೆಯುತ್ತಿದೆ.
ಈ ಕುರಿತು ದೂರು ನೀಡಿರುವ ಶರತ್ ಮಾಧ್ಯಮಗಳ ಜೊತೆ ಮಾತನಾಡಿ, ‘ಎರಡು ದಿನದ ಹಿಂದೆ ನಾನು ದೂರು ಕೊಟ್ಟಿದ್ದೆ. ಹುಲಿಯುಗುರು ಇರುವ ಪದಕವನ್ನು ಅವರು ಧರಿಸಿದ್ದರು. ಇದು ವನ್ಯಜೀವಿ ಕಾಯ್ದೆಯ ಪ್ರಕಾರ ತಪ್ಪು. ಸೆಲೆಬ್ರಿಟಿಗಳು ರೂಲ್ಸ್ ಪಾಲನೆ ಮಾಡಬೇಕು. ಈ ರೀತಿ ಹುಲಿಯುಗುರಿನ ಪದಕ ಧರಿಸೋದು ತಪ್ಪು. ಅದು ಒರಿಜಿನಲ್ಲೋ ಅಥವಾ ಡೂಪ್ಲಿಕೇಟ್ ಅನ್ನೋದು ಫಾರೆನ್ಸಿಕ್ ನವರು ಡಿಸೈಡ್ ಮಾಡಬೇಕು’ ಎಂದರು.
ಬೆಳ್ಳಂಬೆಳಗ್ಗೆ ರಾಮನಗರ ಪೊಲೀಸರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು. ಬಿಗ್ ಬಾಸ್ ತಂಡಕ್ಕೆ ವಿವರಗಳನ್ನು ತಿಳಿಸಿದ ಸಂತೋಷ್ ಅವರನ್ನು ವಶಕ್ಕೆ ಪಡೆದುಕೊಂಡರು. ನಂತರ ಅವರನ್ನು ಬಿಗ್ ಬಾಸ್ ಮನೆಯಿಂದ ಕರೆದುಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.