ಶಿರ್ವ, ಆ.25: ಇಲ್ಲಿನ ಮುಖ್ಯ ರಸ್ತೆಯ ಶಿರ್ವ ಪದವು ಬಸ್ಸು ನಿಲ್ದಾಣದ ಬಳಿ ಬಸ್ಸಿನಿಂದ ಬಿದ್ದ ಶಾಲಾ ಬಾಲಕನ ಎಡ ಕೈ ಬಸ್ಸಿನ ಹಿಂದಿನ ಚಕ್ರದ ಅಡಿಗೆ ಬಿದ್ದು ಜಖಂಗೊಂಡ ಘಟನೆ ಆ. 24 ರ ಸಂಜೆ ನಡೆದಿದೆ.
ಮೊಹಮ್ಮದ್ ಅನ್ವರ್ ಗಾಯಗೊಂಡ ಶಾಲಾ ಬಾಲಕ. ಬೆಳ್ಮಣ್ ಕಡೆಯಿಂದ ಶಿರ್ವ ಪೇಟೆ ಕಡೆಗೆ ಬರುತ್ತಿದ್ದ ಬಸ್ಸು ಪದವು ಬಸ್ನಿಲ್ದಾಣದ ಬಳಿ ನಿಂತಿದ್ದು, ಮಕ್ಕಳು ಬಸ್ಸು ಹತ್ತುತ್ತಿದ್ದಂತೆ ಚಾಲಕ ನಿರ್ವಾಹಕನ ಸೂಚನೆ ಪಾಲಿಸದೆ ನಿರ್ಲಕ್ಷ್ಯದಿಂದ ಮುಂದಕ್ಕೆ ಚಲಾಯಿಸಿದ್ದಾನೆ.
ಪರಿಣಾಮ ಎದುರು ಬಾಗಿಲಿನಲ್ಲಿ ಬಸ್ಸು ಹತ್ತುತ್ತಿದ್ದ ಬಾಲಕ ಮೊಹಮ್ಮದ್ ಅನ್ವರ್ ಬಸ್ಸಿನಿಂದ ಕೆಳಗೆ ಬಿದ್ದಿದ್ದು, ಆತನ ಎಡಕೈ ಬಸ್ಸಿನ ಹಿಂದಿನ ಚಕ್ರದಡಿಗೆ ಬಿದ್ದು ಜಖಂಗೊಂಡಿದೆ. ಚಿಕಿತ್ಸೆಯ ಬಗ್ಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.