ಇಸ್ರೋಗೆ ಭದ್ರ ಬುನಾದಿ ಹಾಕಿಕೊಟ್ಟ ಉಡುಪಿಯ ಭೌತ ವಿಜ್ಞಾನಿ

ಉಡುಪಿ: ಭಾರತ ಇಂದು ಬಾಹ್ಯಾ ಕಾಶದಲ್ಲಿ ಜಗತ್ತಿನ ಗಮನ ಸೆಳೆಯುವ ಸಾಧನೆ ಮಾಡಿದೆ. ಚಂದ್ರಯಾನ 3 ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ ಮಾಡಿದೆ.


ಇಸ್ರೋ ಈ ಸಾಧನೆಯ ಹಿಂದೆ ಉಡುಪಿಯ ಸಾಧಕರೊಬ್ಬರ ಭದ್ರ ಬುನಾದಿಯ ಫ‌ಲವಿದೆ. ಅವರೇ ದಿ| ಪ್ರೊ| ಯು.ಆರ್‌. ರಾವ್‌ (ಉಡುಪಿ ರಾಮಚಂದ್ರ ರಾವ್‌).


ಇಸ್ರೋ (ಭಾರತೀಯ ವ್ಯೋಮ ಸಂಶೋಧನ ಸಂಸ್ಥೆ-ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈ ಸೇಶನ್‌) ಜಾಗತಿಕವಾಗಿ ಬಹು ಎತ್ತರಕ್ಕೆ ಬೆಳೆದಿದೆ. ಇಸ್ರೋ ಎಂದಾಕ್ಷಣ ಡಾ| ಯು.ಆರ್‌. ರಾವ್‌ ನೆನಪಿಗೆ ಬರುತ್ತಾರೆ.

ಇಸ್ರೋ ಮೂಲಕ ಬಾಹ್ಯಾಕಾಶ ವಿಜ್ಞಾನಕ್ಕೆ ಹೊಸ ದಿಕ್ಕು ತೋರಿಸಿದವರು. ಬೆಂಗಳೂರು ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ (1972-84), ಇಸ್ರೊ ಅಧ್ಯಕ್ಷರಾಗಿ, ವ್ಯೋಮ ಇಲಾಖೆ ಕಾರ್ಯದರ್ಶಿಯಾಗಿ (1984-94) ಅವರ ಪಾತ್ರ ಬಲು ದೊಡ್ಡದು.


1972ರಲ್ಲಿ ವಿಕ್ರಂ ಸಾರಾ ಭಾಯಿ ಅವರ ಒತ್ತಾಯಕ್ಕೆ ಮಣಿದು ಉಪಗ್ರಹ ತಂತ್ರಜ್ಞಾನದ ಹೊಣೆಗಾರಿಕೆ ವಹಿಸಿಕೊಂಡ ರಾವ್‌ 1975ರಲ್ಲಿ ಭಾರತಕ್ಕೆ ಆರ್ಯಭಟ ಉಪಗ್ರಹವನ್ನು ಪರಿಚಯಿಸಿದ ಮೇರು ವ್ಯಕ್ತಿತ್ವ ಇವರದ್ದು. ಅಲ್ಲಿಯವರೆಗೆ ವಿದೇಶಗಳಲ್ಲಿ ಮಾತ್ರ ಉಪಗ್ರಹವನ್ನು ನಿರ್ಮಿಸಲಾಗು ತ್ತಿತ್ತು. ಆತ್ಮ ನಿರ್ಭರರಾಗುವತ್ತ ಆಗಲೇ ಚಿತ್ತ ಹರಿಸಲಾರಂಭಿಸಿದರು.

ADVERTISEMENT
ಭಾಸ್ಕರ, ಆ್ಯಪಲ್‌, ರೋಹಿಣಿ, ಇನ್‌ಸಾಟ್‌ 1, ಇನ್‌ಸಾಟ್‌ 2 ಹೀಗೆ ಬಹು ಉದ್ದೇಶಿತ ಸಂವಹನ, ಹವಾಮಾನ ಉಪಗ್ರಹಗಳು, ಅತ್ಯಾಧುನಿಕ ಐಆರ್‌ಎಸ್‌1ಎ, 1ಬಿ ಸೂಕ್ಷ್ಮ ಸಂವಹನ ಉಪಗ್ರಹ ಗಳನ್ನು ಹಾರಿಬಿಡಲಾಯಿತು. ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿ ಉಡಾವಣೆ ಮೂಲಕ ರಾಕೆಟ್‌ ತಂತ್ರಜ್ಞಾನ ಅಭಿವೃದ್ಧಿಗೂ ಇವರೇ ಕಾರಣರು. ಭಾರತದಲ್ಲಿ ಸಂಪರ್ಕಕ್ರಾಂತಿಗೆ ಪ್ರೊ|ರಾವ್‌ ಕೊಡುಗೆ ಕೊಡುಗೆಇದೆ.

ಸಂಪರ್ಕ, ಟಿವಿ ಪ್ರಸಾರ, ಶಿಕ್ಷಣದ ವಿಕಾಸ, ಮಲ್ಟಿಮೀಡಿಯ, ಹವಾಮಾನ ಮತ್ತು ಪ್ರಕೃತಿವಿಕೋಪ ಎಚ್ಚರಿಕೆ ಸೇವೆ ಇತ್ಯಾದಿಗಳ ಮೂಲ ಕಾರಣಕರ್ತರು ಇವರು.ಕೃಷಿ, ಅರಣ್ಯ, ಮೀನುಗಾರಿಕೆ, ತ್ಯಾಜ್ಯ ಭೂಮಿ, ಭೂಗರ್ಭ ಜಲ, ಬರ, ನೆರೆಇತ್ಯಾದಿಗಳಿಗೆ ರಿಮೋಟ್‌ ಸೆನ್ಸಿಂಗ್‌ ಸೆಟ್‌ಲೆçಟ್‌ ಉಪಯೋಗವಾಗುತ್ತಿದ್ದು ಇದರ ಮೂಲ ಕಾರಣ ಕರ್ತರು ಯು.ಆರ್‌. ರಾವ್‌. 1996 ರಲ್ಲಿ ನಿವೃತ್ತರಾದರೂ ದಣಿವಿರದ ವ್ಯಕ್ತಿತ್ವ ಅವರದಾಗಿತ್ತು.

ವಿಕ್ರಂ ಸಾರಾಭಾಯಿ ಅವರ ಒತ್ತಾಸೆಯಂತೆ ಚಿಕ್ಕದೊಂದು ತಂಡದೊಂದಿಗೆ ಉಪಗ್ರಹದ ತಯಾರಿಯಲ್ಲಿ ತೊಡಗಿದ್ದ ಅವರು 1975ರಲ್ಲಿ ಜಗತ್ತು ಭಾರತದತ್ತ ನೋಡುವಂತೆ ಮಾಡಿದರು ಮತ್ತು ಭಾರತಕ್ಕೆ ಆರ್ಯಭಟ ಉಪಗ್ರಹ ಪರಿಚಯಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಭರವಸೆ, ಬುನಾದಿ ಹಾಕಿಕೊಟ್ಟಿದ್ದರು.
ಈಗ ಇಸ್ರೋ ಚಂದ್ರ ಮೇಲೆ ಕಾಲಿಟ್ಟಿದೆ. ಇನ್ನಷ್ಟು ಸಾಧನೆಯನ್ನು ಮಾಡಲಿದೆ. ಆದರೆ, ಅದಕ್ಕೆ ಬುನಾದಿ ಹಾಕಿದವರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಪ್ರೊ| ಯು.ಆರ್‌. ರಾವ್‌. ಬಾಹ್ಯಾಕಾಶ ಕ್ಷೇತ್ರ, ಇಸ್ರೋ ಬೆಳವಣಿಗೆಗೆ ಅವರ ಕೊಡುಗೆ ಅಪಾರ.

ಇವರ ಸಾಧನೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಈ ಮೂಲಕ ಉಡುಪಿ ಜಿಲ್ಲೆ ಮನೆ ಮಾತಾಗಿದೆ.

ಉಡುಪಿ ಮೂಲ
ಪ್ರೊ| ಯು.ಆರ್‌. ರಾವ್‌ ಉಡುಪಿಯವರು. ಜನಿಸಿದ್ದು 1932ರ ಮಾರ್ಚ್‌ 10ರಂದು ತಾಯಿಯ ತವರು ಅದಮಾರಿನಲ್ಲಿ. ಉಡುಪಿ ಬೋರ್ಡ್‌ ಹೈಸ್ಕೂಲ್‌ ಮತ್ತು ಕ್ರಿಶ್ಚಿಯನ್‌ ಸ್ಕೂಲ್‌ನ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ತರಗತಿ ವರೆಗೆ ಓದಿ ಬಳಿಕ ಬಳ್ಳಾರಿಯಲ್ಲಿ ಇಂಟರ್‌  ಮೀಡಿಯಟ್‌ ಶಿಕ್ಷಣ ಪಡೆದರು. ಬಿಎಸ್ಸಿ ಪದವಿಯನ್ನು ಮದ್ರಾಸ್‌ ವಿ.ವಿ.  ಯಿಂದ (1951), ಬನಾರಸ್‌ ಹಿಂದೂ ವಿ.ವಿ. ಯಲ್ಲಿ ಎಂಎಸ್ಸಿ (1953) ಪದವಿ ಪಡೆದರು. ಕಾಸ್ಮಿಕ್‌ ರೇ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದ ರಾವ್‌, 1954ರಲ್ಲಿ ವಿಕ್ರಮ್‌ ಸಾರಾ ಭಾಯ್‌ ಅವರಲ್ಲಿ ಅಹ್ಮದಾಬಾದ್‌ ಫಿಜಿಕಲ್‌ ರಿಸರ್ಚ್‌ ಲ್ಯಾಬೋರೇಟರಿಯಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದಾಗ ಗುಜರಾತ್‌ ವಿ.ವಿ. ಪಿಎಚ್‌ಡಿ ಪದವಿ ನೀಡಿತ್ತು. ಇವರು 2017ರ ಜುಲೈ 24ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದರು.

Scroll to Top