ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ ಮನೆಯಲ್ಲೇ 20 ಅಡಿ ಗುಂಡಿ ತೆಗೆದ ಮಹಿಳೆ; ಆಮೇಲೇನಾಯ್ತು?

ಚಾಮರಾಜನಗರ, ಆ.23: ಜ್ಯೋತಿಷಿ ಹೇಳಿದರು ಅಂತಾ ನಿಧಿ ಆಸೆಗಾಗಿ ಮನೆಯಲ್ಲೇ 20 ಅಡಿ ಆಳ ಗುಂಡಿ ತೋಡಿರುವ ವಿಚಿತ್ರ ಘಟನೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ವಿ.ಎಸ್ ದೊಡ್ಡಿ ಗ್ರಾಮದ ಮನೆಯೊಂದರಲ್ಲಿ ನಿಧಿ ಆಸೆಗೋಸ್ಕರ ಗುಂಡಿ ತೆಗೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆಸಾಮಿಗಳು ಪರಾರಿಯಾಗಿದ್ದಾರೆ.

ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎಂಬುವರು ಕಳೆದ ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಮನೆಯನ್ನು ತೊರೆದು, ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು. ಈ ವೇಳೆ ಸಹೋದರಿಯ ಸಂಬಂಧಿಕ ಪರಶಿವ ಎಂಬವರು ಭಾಗ್ಯ ಅವರನ್ನು ಸ್ಥಳೀಯ ಜೋತಿಷ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ಮನೆಯ ಬಗ್ಗೆ ಶಾಸ್ತ್ರ ಕೇಳಿಸಿದ್ದರು. ಈ ವೇಳೆ ಹಣದ ಆಸೆಗೋಸ್ಕರ ಮನೆಯಲ್ಲಿ ನಿಧಿ ಇರುವುದಾಗಿ ಜೋತಿಷಿ ತಿಳಿಸಿದಾಗ ಇದನ್ನು ಅರಿಯದ ಭಾಗ್ಯ ಅವರು ನಿಧಿ ಶೋಧನೆಗಾಗಿ ಅನುಮತಿ ನೀಡಿದ್ದರು ಎನ್ನಲಾಗಿದೆ.

ಜೋತಿಷಿ ತನ್ನ ಜೊತೆಗಾರನೊಂದಿಗೆ ವಾರದ ಹಿಂದೆ ವಿ.ಎಸ್ ದೊಡ್ಡಿಗೆ ಆಗಮಿಸಿ ಭಾಗ್ಯ ಅವರ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆಯನ್ನು ನೆರವೇರಿಸಿ ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯುವ ಕಾರ್ಯವನ್ನು ಆರಂಭಿಸಿದ್ದರು. 3 ಅಡಿ ಅಗಲ ಹಾಗೂ 20 ಅಡಿ ಆಳವನ್ನು ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ಬಗ್ಗೆ ಸ್ಥಳೀಯರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ತಿಳಿದ ಅಸಾಮಿಗಳು ಮನೆಯಿಂದ ಪರಾರಿಯಾಗಿದ್ದಾರೆ.

ನಿಧಿಗಾಗಿ ಮನೆಯಲ್ಲೇ ಗುಂಡಿ ತೋಡುತ್ತಿರುವ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಒಡೆಯರಪಾಳ್ಯ ಉಪ ಠಾಣೆಯ ಪೊಲೀಸರು ಭಾಗ್ಯ ಅವರಿಗೆ ಇಂತಹ ಕಾರ್ಯ ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಮಾಜ ವೈಚಾರಿಕವಾಗಿ ಎಷ್ಟೇ ಮುಂದುವರೆದರೂ ಈ ರೀತಿಯ ಮೂಢನಂಬಿಕೆ ಪ್ರಕರಣಗಳು ನಡೆಯುತ್ತಿರುವುದು ದುರಂತವೇ ಸರಿ.

You cannot copy content from Baravanige News

Scroll to Top