ಅದಮಾರು, ಜು.28: ಅದಮಾರು ಮಠ ಸಂಚಾಲಿತ ಪೂರ್ಣಪ್ರಜ್ಞ ಶಾಲೆಯ ರಾತ್ರಿ ಕವಲುಗಾರ ಎರ್ಮಾಳು ನಿವಾಸಿ ನವೀನ್ ಬಂಗೇರಾ (57) ಎಂಬವರು ಶುಕ್ರವಾರ ಬೆಳಗ್ಗಿನ ಜಾವ, ಶಾಲೆಯಿಂದ ನೂರು ಮೀಟರ್ ದೂರದ ಶ್ರೀಮತಿ ಯಶೋಧರವರ ವಾಸದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
![](https://i0.wp.com/www.baravanige.com/wp-content/uploads/2023/07/IMG-20230728-WA0004-optimized.jpg?resize=696%2C313&ssl=1)
ಮನೆಯವರು ಆರು ಮೂವತ್ತರ ಸುಮಾರಿಗೆ ಮನೆಯಿಂದ ಹೊರ ಬಂದಾಗ ಬಾವಿಕಟ್ಟೆಯಲ್ಲಿ ಪರ್ಸ್, ನೂರರ, ಐವತ್ತರ ಮತ್ತು 500ರ ನೋಟ್ ಗಳು ಚೆಲ್ಲಿತ್ತು. ಕೆಲವು ನೋಟ್ಗಳನ್ನು ಹರಿದು ಎಸೆಯಲಾಗಿತ್ತು.
ನವೀನ್ ರವರು ಬಾವಿಗೆ ಹಾರಿರಬೇಕೆಂಬ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ,ಘಟನಾ ಸ್ಥಳಕ್ಕೆ ಸ್ಥಳೀಯರಾದ ಸಂತೋಷ್ ಶೆಟ್ಟಿ ಬರ್ಪಾಣಿಯವರು ಆಗಮಿಸಿ ಪಡುಬಿದ್ರಿ ಪೊಲೀಸರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪೊಲೀಸರು ಪರ್ಸನ್ನು ಪರೀಕ್ಷಿಸಿದಾಗ, ಅದರಲ್ಲಿ ಅವರ ಫೊಟೋ ಮತ್ತು ಅದಮಾರು ಸಂಸ್ಥೆಯ ಪತ್ರ ಸಿಕ್ಕಿದೆ. ಇದರಿಂದಾಗಿ ನವೀನ್ ರವರು ಬಾವಿಗೆ ಹಾರಿರಬೇಕೆಂಬ ಶಂಕೆ ವ್ಯಕ್ತವಾಗಿದೆ.
![](https://i0.wp.com/www.baravanige.com/wp-content/uploads/2023/07/IMG-20230728-WA0003-optimized.jpg?resize=696%2C313&ssl=1)
ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದರವರು ಬಾವಿಯಲ್ಲಿ ಹುಡುಕಾಡಿದಾಗ ನವೀನ್ ಮೃತ ದೇಹ ಸಿಕ್ಕಿದ್ದು, ಅದನ್ನು ಹೊರತೆಗೆದಿದ್ದಾರೆ.
ಅವಿವಾಹಿತರಾದ ನವೀನ್ ರವರು ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.