ಉಡುಪಿ: ಬೆಂಗಳೂರಿನ ಗಾಣಿಗರ ಹಳ್ಳಿಯ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದ ಸುಮಾರು (40) ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಅವರ ಶವವನ್ನು ಅಗ್ನಿಶಾಮಕದಳ, ಸ್ಥಳೀಯ ಈಜುಗಾರರು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.
ಬಳಿಕ ಬೆಂಗಳೂರಿನ ಪೋಲೀಸ್ ಅಧಿಕಾರಿಯವರು ಈ ವಿಷಯವನ್ನು ಈಶ್ವರ್ ಮಲ್ಪೆಯವರಿಗೆ ಕರೆ ಮಾಡಿ ತಿಳಿಸುತ್ತಾರೆ.
ಮೊದಲೇ ಸರ್ವ ಸನ್ನದ್ದರಾಗಿರುವ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಜು.20ರ ರಾತ್ರಿ 8:00 ಗಂಟೆಯ ಹೊತ್ತಿಗೆ ಮಲ್ಪೆಯಿಂದ ಬೆಂಗಳೂರಿಗೆ ಆಂಬುಲೆನ್ಸ್ ಮೂಲಕ ತನ್ನ ಪ್ರಯಾಣವನ್ನು ಬೆಳೆಸಿತ್ತು.
ನಿನ್ನೆ ಮುಂಜಾನೆ 5:00 ಗಂಟೆಗೆ ಬೆಂಗಳೂರಿಗೆ ತೆರಳಿ, 7:00 ಗಂಟೆಗೆ ಮೃತದೇಹ ಹುಡುಕುವ ಕೆಲಸ ಆರಂಭವಾಗಿತ್ತು. ಸತತ 4:30 ಗಂಟೆಯ ಪರಿಶ್ರಮದಿಂದ 4 ಆಕ್ಸಿಜನ್ ಸಿಲಿಂಡರ್ ಬಳಸಿಕೊಂಡು 11:30 ಗಂಟೆಯ ಹೊತ್ತಿಗೆ ಮೃತದೇಹವನ್ನು ಮೇಲೆತ್ತಿದರು.
ಈ ಕಾರ್ಯಾಚರಣೆಯಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆಯವರ ಜೊತೆಗೆ ಬುರ್ಹಾನ್ ಮಲ್ಪೆ, ದೀಪು ಮಲ್ಪೆ, ರಕ್ಷಿತ್ ಮಲ್ಪೆ ಭಾಗವಹಿಸಿದ್ದರು.
ಘಟನೆ ನಡೆದ ಸ್ಥಳದಲ್ಲಿ ನೆರೆದಿದ್ದ ಪೋಲೀಸ್ ಅಧಿಕಾರಿಗಳು, ಪೋಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈಶ್ವರ್ ಮಲ್ಪೆ ಮತ್ತು ತಂಡದ ಕೆಲಸವನ್ನು ಕಂಡು ಪ್ರಶಂಸಿಸಿದರು.

