ಕಾರ್ಕಳ, ಜು.22: ಬೈಕ್ ಸ್ಕಿಡ್ ಆಗಿ ಮಹಿಳೆಯೋರ್ವರು ಸಾವನ್ನಪ್ಪಿದ ದುರ್ಘಟನೆ ಜು. 21 ರಂದು ನಿಟ್ಟೆಯಲ್ಲಿ ಸಂಭವಿಸಿದೆ.
ನಿಟ್ಟೆ ಗರಡಿ ಬಳಿ ನಿವಾಸಿ ಮಲ್ಲಿಕಾ ಶೆಟ್ಟಿ (42) ಎಂಬವರೇ ಮೃತ ದುರ್ದೈವಿ.
ಮಂಗಳೂರಿಗೆ ತೆರಳಲು ಹೊರಟಿದ್ದ ಮಲ್ಲಿಕಾ ಅವರನ್ನು ಮಗ ಭವಿಷ್ ಶೆಟ್ಟಿ ಬೈಕ್ನಲ್ಲಿ ಕೂರಿಸಿಕೊಂಡು ನಿಟ್ಟೆ ಬಸ್ ನಿಲ್ದಾಣಕ್ಕೆ ಹೊರಟಿದ್ದರು. ನಿಟ್ಟೆ ಗರಡಿ ಸಮೀಪ ಬೈಕ್ ಸ್ಕಿಡ್ ಆಗಿ ಮಲ್ಲಿಕಾ ಅವರು ಡಾಮರು ರಸ್ತೆಗೆ ಎಸೆಯಲ್ಪಟ್ಟರು. ಪರಿಣಾಮ ಮಲ್ಲಿಕಾ ಅವರ ತಲೆಗೆ ತೀವ್ರತೆರನಾದ ಗಾಯವಾಗಿ ಕೊನೆಯುಸಿರೆಳೆದಿದ್ದಾರೆ.
ಜೋರು ಮಳೆಗೆ ಮಹಿಳೆ ಕೊಡೆ ಬಿಡಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮೃತರು ಪತಿ ಭಾಸ್ಕರ್ ಶೆಟ್ಟಿ, ಪುತ್ರ ಭವಿಷ್ ಹಾಗೂ ಪುತ್ರಿ ದೀಕ್ಷಾ ಅವರನ್ನು ಅಗಲಿದ್ದಾರೆ.