ಉಡುಪಿ: ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆ ಹೆಸರಿನಲ್ಲಿ ನಕಲಿ ಆ್ಯಪ್‌; ಜಾಗ್ರತೆ ವಹಿಸಲು ಎಸ್‌ಪಿ ಸೂಚನೆ

ಉಡುಪಿ, ಜು.17: ರಾಜ್ಯ ಸರಕಾರದ ಉಚಿತ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆ್ಯಪ್‌ಗಳ ಮೂಲಕ ಸೈಬರ್‌ ಕಳ್ಳರು ಸಾರ್ವಜನಿಕರ ವೈಯಕ್ತಿಕ ಮಾಹಿತಿ ಕಲೆ ಹಾಕಿ ದುರ್ಬಳಕೆ ಮಾಡಿಕೊಳ್ಳುವ ಸಂಭವವಿದ್ದು ಜನಸಾಮಾನ್ಯರು ಎಚ್ಚರ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಹಾಕೆ ಮಚ್ಚಿಂದ್ರ ತಿಳಿಸಿದ್ದಾರೆ.

ಯೋಜನೆಗಳಿಗೆ ಸಂಬಂಧಿಸಿ ಸರಕಾರ ಇದುವರೆಗೂ ಯಾವುದೇ ಆಂಡ್ರಾಯ್ಡ್ ಅಪ್ಲಿಕೇಷನ್‌ ಬಿಡುಗಡೆ ಮಾಡಿರುವುದಿಲ್ಲ. ನಕಲಿ ಆ್ಯಪ್‌ಗ್ಳನ್ನು ಯಾರೂ ಕೂಡ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬಾರದು ಮತ್ತು ಸೈಬರ್‌ ಕಳ್ಳರು ಮೆಸೇಜ್‌ ಮೂಲಕ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಈ ಬಗ್ಗೆ ನೀಡುವ ಯಾವುದೇ ಲಿಂಕ್‌ಗಳನ್ನು ಬಳಸಬಾರದು.

ಅಂತಹ ಲಿಂಕ್‌ ಕ್ಲಿಕ್‌ ಮಾಡಿದಾಗ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಬಹುದು. ಯಾರಾದರೂ ಕರೆ ಮಾಡಿ “ನೀವು ಈ ಯೋಜನೆಗೆ ಆಯ್ಕೆಯಾಗಿದ್ದೀರಿ’ ಎಂದು ಹೇಳಿ ವೈಯಕ್ತಿಕ ವಿವರಗಳನ್ನು ಬಯಸಿದಲ್ಲಿ ನೀಡಬಾರದು. ಈ ಯೋಜನೆಗಳ ನೋಂದಣಿಗಾಗಿ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You cannot copy content from Baravanige News

Scroll to Top