ಕೇದಾರನಾಥ ದೇವಾಲಯದ ಪ್ರದೇಶದಲ್ಲಿ ಮೊಬೈಲ್ ಫೋನ್ಗಳನ್ನು ಶೀಘ್ರದಲ್ಲೇ ಬ್ಯಾನ್ ಮಾಡಲು ಮುಂದಾಗಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ರೀಲ್ಸ್ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂಬುದು. ಇತ್ತೀಚೆಗಷ್ಟೇ ದೇವಾಲಯದ ಮುಂದೆ ಪ್ರೊಪೋಸ್ ಮಾಡಿದ್ದು ಹೆಚ್ಚು ವೈರಲ್ ಆಗಿತ್ತು. ಈ ರೀತಿ ಘಟನೆಗಳು ಹೆಚ್ಚಾಗ್ತಿರೋ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಪ್ರದೇಶದಲ್ಲಿ ಮೊಬೈಲ್ ಫೋನ್ಗಳನ್ನು ಶೀಘ್ರದಲ್ಲೇ ನಿಷೇಧಿಸಲಾಗುವುದು ಎಂದು ಬದರಿನಾಥ್ ಕೇದಾರನಾಥ ಟ್ರಸ್ಟ್ ಜುಲೈ 3 ರಂದು ಅಧಿಸೂಚನೆ ಹೊರಡಿಸಿದೆ. ದೇಗುಲದ ಸ್ಥಳದ ಸಮೀಪದಲ್ಲಿ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ರೀಲ್ಸ್ ರಚಿಸುತ್ತಿರುವ ‘ಭಕ್ತ’ರಿಗೆ ಇದು ಎಚ್ಚರಿಕೆಯಂತಿದೆ.
ಕೇದಾರನಾಥ ದೇಗುಲದ ಆವರಣದಲ್ಲಿ ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್ಸ್ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ರೀಲ್ಸ್ ಮಾಡಿ ಜಗತ್ತಿನಾದ್ಯಂತ ನೆಲೆಸಿರುವ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಜನರು ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ, ದೇವಸ್ಥಾನದ ಆವರಣದಲ್ಲಿ ರೀಲ್ಸ್ ಮಾಡುವವರ ವಿರುದ್ಧ, ಪ್ರಭಾವಿಗಳ ಮೇಲೆ ನಿಗಾ ಇಡಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ಟ್ರಸ್ಟ್ನಿಂದ ನೋಟಿಸ್
ಕೇದಾರನಾಥ ದೇವಾಲಯದ ಮುಂದೆ ಹುಡುಗಿಯೊಬ್ಬಳು ತನ್ನ ಸಂಗಾತಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ಕೆಲವೇ ದಿನಗಳ ಬಳಿಕ ಟ್ರಸ್ಟ್ ಈ ಪತ್ರವನ್ನು ನೀಡಿದೆ. ಇನ್ಸ್ಟಾಗ್ರಾಮ್ ವಿಡಿಯೋ ಮಾಡಿದ ಮಹಿಳೆಯನ್ನು ವಿಶಾಖಾ ಫುಲ್ಸುಂಗೆ ಎಂದು ಗುರುತಿಸಲಾಗಿದ್ದು, ಇವರು ಇನ್ಸ್ಟಾಗ್ರಾಮ್ನಲ್ಲಿ 8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಇನ್ಫ್ಲುಯೆನ್ಸರ್ ಎನಿಸಿಕೊಂಡಿದ್ದಾರೆ. ಅವರು ಮೊಣಕಾಲುಗಳ ಮೇಲೆ ಕುಳಿತು ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ್ದರು.