ಉಡುಪಿ: ಪೊಲೀಸರಂತೆ ನಟಿಸಿ ಸಾರ್ವಜನಿಕರಿಂದ ಹಣ ವಸೂಲಿ; ಇಬ್ಬರ ಬಂಧನ..!

ಉಡುಪಿ, ಮೇ 28: ಪೊಲೀಸ್ ಅಧಿಕಾರಿಗಳಂತೆ ನಟಿಸಿ ಅಪರಿಚಿತರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಶಿರ್ವ ನಿವಾಸಿ ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಮಣಿಪಾಲದ ಅರ್ಬಿ ಫಾಲ್ಸ್‌ನಲ್ಲಿ ಮಾತನಾಡುತ್ತಿದ್ದಾಗ ಹಾವೇರಿಯ ಹನುಮಂತಪ್ಪ ಮತ್ತು ಮುರುಡೇಶ್ವರದ ಮಹದೇವಪ್ಪ ಎಂದು ಗುರುತಿಸಲಾದ ಇಬ್ಬರು ಶಂಕಿತರು ಅವರ ಬಳಿಗೆ ಬಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ.

ಇನ್ನು ಮಂಜುನಾಥ್ ಅವರು ಸ್ಥಳದಲ್ಲಿ ಇರುವ ಬಗ್ಗೆ ಪ್ರಶ್ನಿಸಿದ್ದು, ಅವರು ಮಣಿಪಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಅವರನ್ನು ಸಂಪರ್ಕಿಸುವುದಾಗಿ ಹೇಳಿದರು.

ಆರೋಪಿಗಳಿಬ್ಬರು ಮತ್ತೊಬ್ಬ ಸಹಚರ ಲಕ್ಷ್ಮಣ ಕುಪ್ಪಗೊಂಡ ಎಂಬಾತನಿಗೆ ದೂರವಾಣಿ ಕರೆ ಮಾಡಿ ಸ್ಪೀಕರ್‌ ಫೋನ್‌ ಹಾಕಿದ್ದರು. ಲಕ್ಷ್ಮಣ್ ಮಣಿಪಾಲ ಪೊಲೀಸ್ ಠಾಣೆಯ ಎಸ್‌ಐ ಎಂದು ಯಾಮಾರಿಸಿ ಆರೋಪಿಗಳಿಬ್ಬರಿಗೆ 5 ಸಾವಿರ ರೂಪಾಯಿ ನೀಡಬೇಕು, ಇಲ್ಲವಾದಲ್ಲಿ ಪ್ರಕರಣ ದಾಖಲಿಸುವುದಾಗಿ ಮಂಜುನಾಥ ಅವರಿಗೆ ಒತ್ತಾಯಿಸಿದ್ದಾರೆ. ಭಯದಿಂದ ಮಂಜುನಾಥ್ ಅವರು ಗೂಗಲ್ ಪೇ ಮೂಲಕ 5 ಸಾವಿರ ರೂ. ಹಾಕಿದ್ದಾರೆ.

ಬಳಿಕ ಅನುಮಾನಗೊಂಡ ಮಂಜುನಾಥ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಣಿಪಾಲ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಸುಲಿಗೆ ದಂಧೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

You cannot copy content from Baravanige News

Scroll to Top