ಉಡುಪಿ: ಮೇ.10ರ ವಿಧಾನ ಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧ; ಜಿಲ್ಲಾಧಿಕಾರಿ

ಉಡುಪಿ, ಮೇ 8: ವಿಧಾನ ಸಭಾ ಚುನಾವಣೆ ಸಲುವಾಗಿ ಜಿಲ್ಲೆಯಾದ್ಯಂತ ಮೇ.10 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಪ್ರಕ್ರಿಯೆಗೆ ಸಂಬಂಧಿಸಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಅವರು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಮತದಾನವು ಮೇ 10 ರಂದು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಜರುಗಲಿದ್ದು, ಈ ಬಗ್ಗೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ.

ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳಿಗೆ ಅಂತಿಮ ಮತದಾರರ ಪಟ್ಟಿಯ ಪ್ರತಿಯನ್ನು ನೀಡಲಾಗಿದೆ. ಎಲ್ಲಾ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತಗಟ್ಟೆಗಳ ಪಟ್ಟಿಯನ್ನು ಒದಗಿಸಲಾಗಿದೆ. ಮತದಾರರು EPIC CARD ಅಥವಾ ಚುನಾವಣಾ ಆಯೋಗ ಅನುಮೋದಿಸಿದ ಆಧಾರ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ, ಅಂಚೆ ಕಛೇರಿ ಮತ್ತು ಬ್ಯಾಂಕ್‌ಗಳಲ್ಲಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ ಗುರುತಿನ ದಾಖಲೆಗಳೊಂದಿಗೆ ಹಾಜರಾಗಬೇಕು.

ವಿಶೇಷ ಚೇತನ (ದೈಹಿಕ ದುರ್ಬಲ) ಮತದಾರರಿಗಾಗಿ ಗಾಲಿ ಕುರ್ಚಿ, ಭೂತಕನ್ನಡಿ (Magnified glass) ಬೈಲ್ ಲಿಪಿಯ ಮಾದರಿ ಮತಪತ್ರ ಆದ್ಯತೆ ಮೇಲೆ ಪ್ರವೇಶ, ರ್ಯಾಂಪ್ ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಸಿದ್ಧತೆ ಮಾಡಲಾಗಿದೆ.

ಜಿಲ್ಲೆಯ ಉಡುಪಿ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ – ಡಿ ಮಸ್ಟರಿಂಗ್ ಪ್ರಕ್ರಿಯೆ ಉಡುಪಿಯ ಸೈಂಟ್ ಸಿಸಿಲಿಸ್ ಎಜುಕೇಶನ್ ಟ್ರಸ್ಟ್ ನಲ್ಲಿ, ಕುಂದಾಪುರ ಕ್ಷೇತ್ರದ ಪ್ರಕ್ರಿಯೆ ಭಂಡಾರ್ಕಾಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು, ಬೈಂದೂರು – ಸರಕಾರಿ ಪದವಿ ಪೂರ್ವ ಕಾಲೇಜು, ಕಾಪು – ದಂಡತೀರ್ಥ ಪಿಯು ಕಾಲೇಜು, ಕಾರ್ಕಳ – ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

ಹಾಗೂ ಚುನಾವಣೆಯ ಸಲುವಾಗಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಲ್ಲಿ “ಈಗಾಗಲೆ ಒಟ್ಟು ರೂ 2,14,91,030 ನಗದನ್ನು ಹಾಗೂ 42313.13 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ವಸತಿಗೃಹ, ಲಾಡ್ಡಿಂಗ್, ಧರ್ಮಶಾಲೆ, ಯಾತ್ರಿ ನಿವಾಸಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕೊನೆಯ 48ಕಡೆಗಳಲ್ಲಿ ಉಡುಪಿ ಜಿಲ್ಲೆಯ ಮತದಾರರಲ್ಲದವರು ಈ ಕ್ಷೇತ್ರಗಳಲ್ಲಿ ಉಳಿಯುವಂತಿಲ್ಲ ಎಂದು ಸ್ಪಷ್ಟ ಸೂಚನೆಯನ್ನು ಕೂಡಾ ನೀಡಲಾಗಿದೆ’ ಎಂದರು.

ಈ ವೇಳೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಹಾಕೈ ಅಕ್ಷಯ್ ಮಚೀಂದ್ರ ಅವರು ಮಾತನಾಡಿ, “ಜಿಲ್ಲೆಯಲ್ಲಿ 19 ಅರೆಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಜನರಲ್ಲಿ ವಿಶ್ವಾಸ ತುಂಬಲು ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಯ ನ್ನು ನಡೆಸಲು ಜಿಲ್ಲೆಯಲ್ಲಿ 90 ರೂಟ್ ಮಾರ್ಚ್ ಗಳನ್ನು ಮಾಡಲಾಗಿದೆ. 741 ಪ್ರಕರಣದಲ್ಲಿ 850 ಕ್ಕೂ ಹೆಚ್ಚು ಜನರಿಂದ ಬಾಂಡಿಂಗ್ ಮಾಡಿಸಿದ್ದು, ಇದರಲ್ಲಿ ಮತ್ತೆ ತಪ್ಪು ಮಾಡಿದ 7 ಜನರಿಂದ 7 ಲಕ್ಷ ದಂಡ ವಸೂಲಿ ಮಾಡಿದೆ. 13 ಜನರನ್ನು ಗಡಿಪಾರು ಮಾಡಿದೆ, 2 ಜನರ ನ್ನು ಗುಂಡಾ ಕಾಯ್ದೆಯಡಿ ಬಂಧಿಸಿದೆ. 3300 ಆಯುಧಗಳಲ್ಲಿ 27 ಹೊರತುಪಡಿಸಿ ಉಳಿದ ಎಲ್ಲಾ ಆಯುಧಗಳನ್ನು ಠೇವಣಿ ಮಾಡಲಾಗಿದೆ. ಜಿಲ್ಲೆಯಲ್ಲಿ ನಡೆದ ಎಲ್ಲಾ ಪ್ರಚಾರ ಕಾರ್ಯ ಕ್ರಮಗಳಿಗೆ ಸೂಕ್ತ ಭದ್ರತೆ ಒದಗಿಸಿದೆ. ಮತದಾನ ದಿನದಂದು 73 ವಿಶೇಷ ಸೆಕ್ಟರ್ ಗಳ ಮೂಲಕ ಎಲ್ಲಾ ಮತಗಟ್ಟೆಗಳ ನಿಗಾ ವಹಿಸಲಾಗುವುದು” ಎಂದರು.

You cannot copy content from Baravanige News

Scroll to Top