Saturday, April 20, 2024
Homeಸುದ್ದಿರಾಜ್ಯವಿ.ಹಿಂ.ಪ. ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ : ಅಪಾಯದಿಂದ ಪಾರು

ವಿ.ಹಿಂ.ಪ. ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ : ಅಪಾಯದಿಂದ ಪಾರು

ಕೊಡಗು : ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು ಅವರ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರು ಬುಧವಾರ ಕುಶಾಲನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚೆಟ್ಟಳ್ಳಿ ಮಾರ್ಗವಾಗಿ ಮನೆಗೆ ಹಿಂತಿರುಗುವಾಗ ಅಬ್ಯಾಲ ಬಳಿ ಈ ದುರ್ಘಟನೆ ನಡೆದಿದೆ.

ದುಷ್ಕರ್ಮಿಗಳು ಹಾರಿಸಿದ ಗುಂಡು ಕೃಷ್ಣಮೂರ್ತಿ ಅವರು ಚಲಾಯಿಸುತ್ತಿದ್ದ ಕಾರಿಗೆ ತಗುಲಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಬಳಿಕ ಮಡಿಕೇರಿಗೆ ಬಂದ ಕೃಷ್ಣಮೂರ್ತಿ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಗುಂಡು ಹಾರಿಸಿರುವ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಶಾಂತಿ ಕದಡುವ ಪ್ರಯತ್ನ ಇದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಚುನಾವಣೆ ಸಂದರ್ಭದಲ್ಲಿ ಕೋವಿಗಳನ್ನು ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವಂತೆ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದ್ದು, ಯಾರೋ ಬಂದೂಕು ಠೇವಣಿ ಇಡದವರು ಇಲ್ಲವೇ ಪರವಾನಗಿ ರಹಿತ ಕೋವಿ ಹೊಂದಿರುವರು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News