ಉಡುಪಿ: ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಪಕ್ಷದಲ್ಲಿ ಬೀಸಲಾರಂಭಿಸಿದೆ ಭಿನ್ನಮತದ ಬಿರುಗಾಳಿ

ಉಡುಪಿ, ಏ 06: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತದ ಬಿರುಗಾಳಿ ಬೀಸಲಾರಂಭಿಸಿದೆ.


ಇಂದು ಬಿಡುಗಡೆಯಾದ ಕಾಂಗ್ರೆಸ್ ನ ಎರಡನೇ ಪಟ್ಟಿಯಲ್ಲಿ ಯುವ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಗೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದ್ದು ಇದರ ಬೆನ್ನಲ್ಲೇ ಇತರ ಟಿಕೆಟ್ ಆಕಾಂಕ್ಚಿಗಳಿಂದ ಇದೀಗ ಅಪಸ್ವತ ಕೇಳಿಬಂದಿದೆ.

ಉಡುಪಿ ಕ್ಷೇತ್ರಕ್ಕೆ ಅಂತಿಮ ಪಟ್ಟಿಯಲ್ಲಿ ಮೂವರು ಆಕಾಂಕ್ಷಿಗಳು ಇದ್ದು ಇವರಲ್ಲಿ ಪ್ರಸಾದ್ ರಾಜ್ ಕಾಂಚನ್ ಗೆ ಟಿಕೆಟ್ ದೊರೆತಿದೆ. ಆದರೆ ಇತರ ಆಕಾಂಕ್ಷಿಗಳು ಪಕ್ಷದ ನಿರ್ಧಾರಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.‌ ಕೆಲವೊಂದು ಕಾರ್ಯಕರ್ತರಿಂದಲೂ ಪಕ್ಷದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಸ್ವರ ಕೇಳಿಬರುತ್ತಿದೆ . ಇನ್ನು ಪಕ್ಷದ ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿಯಂತೆ ಇಂದು ಸಂಜೆ ಅತೃಪ್ತರಿಂದ ಕಾಂಗ್ರೆಸ್ ಭವನದಲ್ಲಿ ಸಭೆ ಸೇರುವ ಸಾಧ್ಯತೆ ಇದ್ದು ಈ ಸಭೆಯಲ್ಲಿ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಅಂತಿಮ ಪಟ್ಟಿಯಲ್ಲಿ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಕೃಷ್ಣ ಮೂರ್ತಿ ಆಚಾರ್ಯ ಹೆಸರು ಉಡುಪಿ ಕ್ಷೇತ್ರಕ್ಕೆ ಅಂತಿಮ ಪಟ್ಟಿಯಲ್ಲಿತ್ತು. ಎಲ್ಲಾ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೇ ಕಾಂಗ್ರೆಸ್ ನಾಯಕರು ಟಿಕೆಟ್ ಘೋಷಿಸಿದ್ದಾರೆ. ಹೀಗಾಗಿ ಇತರ ಆಕಾಂಕ್ಷಿಗಳು ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಇತರ ಆಕಾಂಕ್ಷಿಗಳಿಂದ ಸಭೆ ನಡೆಸಿ ಮುಂದಿನ ನಡೆಯ ಕುರಿತು ಚರ್ಚಿಸಲು ತೀರ್ಮಾನ ಕೈಗೊಳ್ಳಲು ಇಂದು ಸಂಜೆ ಉಡುಪಿ ಕಾಂಗ್ರೆಸ್ ಭವನದಲ್ಲಿ ಅತೃಪ್ತರಿಂದ ಸಭೆ ನಡೆಯುವ ಸಾಧ್ಯತೆ ಇದೆ.

ಮತ್ತೊಂದೆಡೆ ಕೃಷ್ಣಮೂರ್ತಿ ಆಚಾರ್ಯ‌ ಅವರ ‌ಅಭಿಮಾನಿಗಳಿಂದ ಇಂದು ಸಂಜೆ 5 ಗಂಟೆಗೆ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ಮಥುರಾ ಛತ್ರ ಹೋಟೆಲ್ ನಲ್ಲಿ ಸಭೆ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

You cannot copy content from Baravanige News

Scroll to Top