ಉಡುಪಿ: ಪಾಳು ಬಿದ್ದ ಕಟ್ಟಡದಲ್ಲಿ ಯುವಕನೊರ್ವನ ಶವ ಪತ್ತೆ


ಉಡುಪಿ, ಏ 02: ಕಲ್ಸಂಕ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳ ಸಂಪರ್ಕಿಸುವ ರಸ್ತೆ ಸನಿಹ ನಿರ್ಮಾಣ ಹಂತದಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ, ಕನಕ ಮಹಲ್ ಕಟ್ಟಡದಲ್ಲಿ ಅಪರಿಚಿತ ಯುವಕನೊರ್ವನ ಶವವು ಕೊಳೆತ ಸ್ಥಿತಿಯಲ್ಲಿ ಶನಿವಾರ ಕಂಡುಬಂದಿದೆ.


ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರು ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಘಟನಾ ಸ್ಥಳದಲ್ಲಿದ್ದು ಎಸ್ ಐ ಮಹೇಶ್ ಟಿ.ಎಮ್, ಹೆಡ್ ಕಾನ್ಸ್ಟೇಬಲ್ ಸುಷ್ಮಾ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು, ಸುನೀಲ್ ಬೈಲಕೆರೆಯವರು ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು, ಇಲಾಖೆಗೆ ಸಹಕರಿಸಿದರು.

ಪಾಳುಬಿದ್ದಿರುವ ಕನಕ ಮಹಲ್ ಬಹುಮಹಡಿ ಕಟ್ಟಡದಲ್ಲಿ ಪತ್ತೆಯಾಗಿರುವ ಶವಗಳ ಸಂಖ್ಯೆ ಆರಕ್ಕೆ ಎರಿದೆ. ವಾರದ ಹಿಂದೆ ಇದೇ ಕಟ್ಟಡದಲ್ಲಿ ಶವವೊಂದು ಪತ್ತೆಯಾಗಿತ್ತು. ಕಟ್ಟಡಕ್ಕೆ ಸಂಬಂಧಪಟ್ಟವರು ಅಪರಿಚಿತರು ಒಳ ನುಸುಳದಂತೆ ಕಾವಲುಗಾರ ನೇಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Scroll to Top