ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

ಕಡಬ: ಯುವಕನೋರ್ವ ಕುಮಾರಧಾರ ನದಿಯ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದು ಅಗ್ನಿಶಾಮಕದಳ ಮತ್ತು ಪೊಲೀಸರು ಕಾರ್ಯಾಚರಣೆ ಮೂಲಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ನಡೆದಿದೆ.

ಭಾರೀ ಮಳೆ ಹಿನ್ನಲೆ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಪುಳಿಕುಕ್ಕು ಸೇತುವೆ ಮತ್ತು ರೈಲು ಸೇತುವೆ ಮಧ್ಯಭಾಗದಲ್ಲಿರುವ ಪೊದೆಯೊಂದರಲ್ಲಿ ಯುವಕ ಸಿಲುಕಿಕೊಂಡು ರಕ್ಷಣೆಗಾಗಿ ಕೂಗಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರಾತ್ರಿಯಿಂದಲೇ ಕೂಗಾಡುವ ಧ್ವನಿ ಕೇಳುತ್ತಿತ್ತು ಎನ್ನಲಾಗಿದೆ.

ಬ್ಯಾಗ್ ಸೇತುವೆ ಪಕ್ಕದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ಯುವಕ ನದಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೋ ಅಥವಾ ಬೇರೆ ಏನಾದರೂ ಘಟನೆ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವಕನನ್ನು ರಕ್ಷಣೆ ಮಾಡಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

Scroll to Top