Thursday, May 16, 2024
Homeಸುದ್ದಿಕರಾವಳಿವಿವಾಹಿತೆ ಆತ್ಮಹತ್ಯೆ : ಪತಿ, ಮನೆಯವರಿಂದ ಕಿರುಕುಳ ಆರೋಪ

ವಿವಾಹಿತೆ ಆತ್ಮಹತ್ಯೆ : ಪತಿ, ಮನೆಯವರಿಂದ ಕಿರುಕುಳ ಆರೋಪ

ಕುಂದಾಪುರ : ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊರವಡಿ ಗ್ರಾಮದ ಹಳೆಕಟ್ಟು ಎಂಬಲ್ಲಿ ಎ. 28ರಂದು ಸಂಭವಿಸಿದ್ದು, ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡಿರುವುದಾಗಿ ಆರೋಪಿಸಿ ಮೃತಳ ತಾಯಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಜಗದೀಶ್‌ ಅವರ ಪತ್ನಿ ಸೌಜನ್ಯಾ (27) ಆತ್ಮಹತ್ಯೆ ಮಾಡಿ ಕೊಂಡವರು. ಈ ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ.

ಪ್ರಕರಣದ ವಿವರ :

ಕುಂಭಾಶಿ ನಿವಾಸಿಯಾದ ಸೌಜನ್ಯಾ ಅವರ ವಿವಾಹವು ಕೊರವಡಿಯ ಬಸವ ಅವರ ಪುತ್ರ ಜಗದೀಶ್‌ ಅವರೊಂದಿಗೆ 2021ರ ಮೇ 1ರಂದು ನಡೆದಿತ್ತು. ಎ. 27ರಂದು ರಾತ್ರಿ 9 ಗಂಟೆಗೆ ಸೌಜನ್ಯಾ ತನ್ನ ಸೋದರಮಾವ ಉದಯ ಅವರಿಗೆ ಕರೆ ಮಾಡಿ ತನಗೆ ಪತಿ ಜಗದೀಶ, ಅವರ ತಾಯಿ ಚಂದು, ಪತಿಯ ಅಕ್ಕಂದಿರಾದ ಶೋಭಾ, ಶ್ಯಾಮಲಾ ಹಾಗೂ ಮೈದುನ ಪುಂಡಲೀಕ ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದ್ದರು.


ಈ ವೇಳೆ ಉದಯ ಅವರು ಬುದ್ಧಿವಾದ ಹೇಳಿ ಒಳ್ಳೆಯ ರೀತಿಯಲ್ಲಿ ಸಂಸಾರ ನಡೆಸುವಂತೆ ತಿಳಿಸಿದ್ದರು.

ಆದರೆ ಬಳಿಕ ಸೌಜನ್ಯಾ ಅವರು ಮತ್ತೆ ರಾತ್ರಿ 9.45ರ ವೇಳೆಗೆ ಉದಯ ಅವರಿಗೆ ಕರೆ ಮಾಡಿ, ಪತಿ ಜಗದೀಶ್‌ ತನಗೆ ಹೊಡೆದು ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಅದರಂತೆ ಉದಯ ಅವರು ಜಗದೀಶ್‌ ಅವರ ಮನೆಗೆ ತೆರಳಿದ್ದು, ಈ ವೇಳೆ ಜಗದೀಶ್‌ ಅವರು ಪತ್ನಿ ಸೌಜನ್ಯಾ ಅವರನ್ನು ಎ. 28ರಂದು ತವರು ಮನೆಗೆ ಬಿಟ್ಟು ಹೋಗುವುದಾಗಿ ತಿಳಿಸಿದ್ದರು. ಆದರೆ ಎ. 27ರ ಮಧ್ಯರಾತ್ರಿ 12.34ಕ್ಕೆ ಜಗದೀಶ್‌ ಅವರು ಉದಯ ಅವರಿಗೆ ಕರೆ ಮಾಡಿ, ಕೂಡಲೇ ಮನೆಗೆ ಬನ್ನಿ ಎಂದು ತಿಳಿಸಿದ್ದರು. ಅದರಂತೆ ಉದಯ ಅವರು ಅಲ್ಲಿಗೆ ತೆರಳಿದಾಗ ಜಗದೀಶ್‌ ಅವರ ಮನೆಯವರು ಕಾರಿನಲ್ಲಿ ಮನೆಯಿಂದ ಕೋಟೇಶ್ವರದ ಆಸ್ಪತ್ರೆಗೆ ಹೊರಟಿದ್ದರು. ಉದಯ ಅವರನ್ನು ಹಿಂಬಾಲಿಸಿಕೊಂಡು ಆಸ್ಪತ್ರೆಯಲ್ಲಿ ಹೋಗಿ ವಿಚಾರಿಸಿದಾಗ ಸೌಜನ್ಯಾ ಅವರು ಪತಿಯ ಮನೆಯ ಒಳಗಡೆ ರಾತ್ರಿ 9.30ರಿಂದ ಮಧ್ಯರಾತ್ರಿ 12.30ರ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿದುಬಂದಿತ್ತು.

ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್‌, ಎಸ್‌ಐ ವಿನಯ್‌ ಕೊರ್ಲಹಳ್ಳಿ ಹಾಗೂ ಸಿಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪ್ರಭಾರ ತಹಶೀಲ್ದಾರ್‌ ಪ್ರದೀಪ್‌ ಅವರು ಪಂಚನಾಮೆ ನಡೆಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News