ಉಡುಪಿ: ರೌಡಿ ದಿವಾಕರ್ ನಿವಾಸದ ಮೇಲೆ ಪೊಲೀಸ್‌ ದಾಳಿ; ಸಜೀವ ಗುಂಡುಗಳು ಸೇರಿದಂತೆ ಅಕ್ರಮ ವಸ್ತುಗಳು ವಶಕ್ಕೆ

ಉಡುಪಿ, ಏ 03: ರೌಡಿ ದಿವಾಕರ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ ಸಜೀವ ಗುಂಡುಗಳು ಸೇರಿದಂತೆ ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ನಡೆದಿದೆ.

ಬ್ರಹ್ಮಾವರ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಮಧು ಬಿ.ಇ ಅವರಿಗೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ರೌಡಿ ದಿವಾಕರ ಎಂಬಾತನು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನೆಲೆ ಮಂಗಳವಾರ ಸಿಬ್ಬಂದಿಯವರೊಂದಿಗೆ ಆತನ ಮನೆಗೆ ತೆರಳಿ ಪರಿಶೀಲಿಸಿದಾಗ ಕಪ್ಪು ಬಣ್ಣದ ಬಟ್ಟೆ ಪೌಚ್‌, ಸಜೀವ ಮದ್ದು ಗುಂಡುಗಳು, ಮಸಿ ಕೋವಿಗೆ ಬಳಸುವ ಮದ್ದುಗುಂಡುಗಳು, ಪ್ಲಾಸ್ಟಿಕ್‌ ಪೌಚ್‌ ನಲ್ಲಿ ಇರಿಸಲಾದ ಡೆಟೋನೇಟರ್ ಗಳು, ಪ್ಲಾಸ್ಟಿಕ್‌ ಪೌಚ್‌ನಲ್ಲಿ ಇರಿಸಲಾದ ಯಾವುದೋ ಪ್ರಾಣಿಯ ಹಲ್ಲಿನ ಆಕಾರದ ಸ್ವತ್ತುಗಳು ಹಾಗೂ ಯಾವುದೋ ಪ್ರಾಣಿಯ ಉಗುರಿನ ಆಕಾರದ ಸ್ವತ್ತುಗಳು, ಪಾಸ್ಟಿಕ್ ಪೌಚ್‌ನಲ್ಲಿ ಇರಿಸಿದ ಪಿಸ್ತೂಲ್ ಗೆ ಬಳಸುವ 7.65 ಎಂಎಂ ಸಜೀವ ಗುಂಡುಗಳು, 15 ಇಂಚು ಉದ್ದದ ಹಳೆಯ ಕೋವಿಯ ಮರದ ಬಟ್, ಹಾಕಿ ಸ್ಟಿಕ್, ಸ್ಟೀಲ್ ಚಾಕುಗಳು, ಸ್ಟೀಲಿನ ದೊಡ್ಡ ಗಾತ್ರದ ಮಚ್ಚು, ನೀಲಿ ಬಣ್ಣದ ಪ್ಲಾಸ್ಟಿಕ್‌ ಚೀಲದಲ್ಲಿದ್ದ ಒಣಗಿಸಿದ ಗಾಂಜಾ, ಸಣ್ಣ ಖಾಲಿ ಪ್ಲಾಸ್ಟಿಕ್‌ ಪೌಚ್‌ಗಳು, ಪ್ಲಾಸ್ಟಿಕ್‌ ಕ್ಯಾನ್ ನಲ್ಲಿ ತುಂಬಿಸಿಟ್ಟಿರುವ ಸ್ಪಿರೀಟ್ ಪತ್ತೆಯಾಗಿದೆ.

ಪೊಲೀಸರು ಆತನ ಮನೆಯಲ್ಲಿ ದೊರೆತ ಎಲ್ಲಾ ವಸ್ತುಗಳನ್ನು ಸ್ವಾಧೀನಪಡೆಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಕರ್ನಾಟಕ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ.

You cannot copy content from Baravanige News

Scroll to Top