ಕಾಪು: ಕಯಾಕ್ ಮೂಲಕ ಮೀನುಗಾರಿಕೆ: ಬಲೆಗೆ ಸಿಲುಕಿ ಯುವಕ ಸಾವು

ಕಾಪು, ಮಾ 01: ಕಾಪುವಿನ ಪೊಲಿಪು ಕಡಲಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಬಲೆಗೆ ಸಿಲುಕಿಕೊಂಡು ಸಾವನ್ನಪಿದ ಘಟನೆ ಮಾ.01ರ ಇಂದು ಮುಂಜಾನೆ ನಡೆದಿದೆ.

ಪೊಲಿಪು‌ ನಿವಾಸಿ ಕಿಶೋರ್ (29) ಮೃತ ದುರ್ದೈವಿ. ಇವರು ದಿನನಿತ್ಯ ಕಯಾಕಿಂಗ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆ ಮಾಡುತ್ತಿದ್ದರು.

ಇಂದು ಮುಂಜಾನೆಯೂ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಬೇರೆ ಮೀನುಗಾರಿಕಾ ಬೋಟಿನವರಿಗೆ ಮೃತದೇಹ ಪತ್ತೆಯಾಗಿದೆ. ನಂತರ ದಡಕ್ಕೆ ಕಯಾಕ್ ಹಾಗು ಮೃತದೇಹವನ್ನು ತಂದಿದ್ದಾರೆ.

ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾ ಸದಸ್ಯ ಕಿರಣ್ ಆಳ್ವ, ವಿಜಯ್ ಕರ್ಕೇರ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಸ್ಥಳೀಯರಾದ ಶಿವಾಜಿ ಸುವರ್ಣ, ಬಾಲಕೃಷ್ಣ ಹಾಗೂ ಕಾಪು ಪೊಲೀಸರು ಭೇಟಿ ನೀಡಿದ್ದಾರೆ.

You cannot copy content from Baravanige News

Scroll to Top