ಇಲ್ಲಿ ಕೇಳಿ ಬರುತ್ತಿದೆಯಂತೆ ರಕ್ತೇಶ್ವರಿ ದೈವದ ಗೆಜ್ಜೆ ಸದ್ದು ; ಪ್ರಶ್ನಾ ಚಿಂತನೆಯಲ್ಲಿ ಸಿಕ್ಕ ಉತ್ತರವೇನು ಗೊತ್ತಾ..!?

ಮಂಗಳೂರು : ದೈವಗಳು ನಂಬಿದವರನ್ನು ಯಾವತ್ತೂ ಕೈ ಬಿಡಲ್ಲ ಅನ್ನೋದು ಕರಾವಳಿಗರ ನಂಬಿಕೆ. ಹೀಗಾಗಿ ತುಳುನಾಡಿನಲ್ಲಿ ದೈವಾರಾಧನೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಇನ್ನು ಇತ್ತೀಚೆಗೆ ಏಯ್ಯಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಬದಿಯಲ್ಲಿ ಇರುವ ನಾಗಮಂಟಪ ರಸ್ತೆಯ ರಕ್ತೇಶ್ವರಿ ಕ್ಷೇತ್ರದಲ್ಲಿ ದೈವದ ಗೆಜ್ಜೆ ಶಬ್ಧದ ಕೇಳಿ ಬರುತ್ತಿದೆ ಎಂದು ಹೇಳಲಾಗುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೂಡ ನಡೆದಿದ್ದವು. ಸದ್ಯ ಈಗ ಪ್ರಶ್ನಾ ಚಿಂತನೆ ಹಾಕಿದಾಗ ರಕ್ತೇಶ್ವರಿ ದೈವದ ಇರುವಿಕೆ ಪತ್ತೆಯಾಗಿದೆ. ರಕ್ತೇಶ್ವರಿ ದೈವದ ಪವಾಡಕ್ಕೆ ಜನ ಮನಸೋತಿದ್ದಾರೆ.

ತುಳುನಾಡ ದೈವಾರಾಧನೆಯ ಮತ್ತೊಂದು ವಿಸ್ಮಯಕಾರಿ ಕಥೆ ಏಯ್ಯಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಕೇಳಿ ಬಂದಿದೆ. ಇಲ್ಲಿನ ಜನರಿಗೆ ಬೆಂಕಿ ಬೆಳಕು, ಗೆಜ್ಜೆ ಸದ್ದಿನ ಜೊತೆಗೆ ರಕ್ತೇಶ್ವರಿ ದೈವ ಸಂಚರಿಸುವ ಅನುಭವಗಳಾಗುತ್ತಿವೆ. ಗ್ರಾಮದ ಅನೇಕ ಜನ ಬೆಳಕಿನ ದರ್ಶನ, ಸದ್ದಿನ ಅನುಭವ ಮಾಡಿದ್ದಾರೆ. ಈ ಅನುಭವದಿಂದ ಚಿಂತೆಗೆ ಬಿದ್ದಿದ್ದ ಜನರಿಗೆ ದೈವದ ಪವಾಡ ಇರುವುದು ಪತ್ತೆಯಾಗಿದೆಯಂತೆ.

ಬಹಳ ವರ್ಷಗಳ ಹಿಂದೆ ಏಯ್ಯಾಡಿ ರಕ್ತೇಶ್ವರಿ ದೈವ ಆರಾಧನೆಗೆ ಒಳಗಾಗಿದ್ದ ಪ್ರದೇಶ. ಆದರೆ ಕೆಲವು ವರ್ಷಗಳಿಂದ ರಕ್ತೇಶ್ವರಿ ದೈವದ ಆರಾಧನೆ ಇಲ್ಲಿ ಸ್ಥಗಿತವಾಗಿತ್ತು. ಗ್ರಾಮದಲ್ಲೊಂದು ದೈವಸ್ಥಾನವಿದೆ ಎಂಬ ಬಗ್ಗೆ ಗ್ರಾಮಸ್ಥರಿಗೂ ಗೊತ್ತಿರಲಿಲ್ಲ. ಆದರೆ ಪ್ರಶ್ನಾ ಚಿಂತನೆಯಲ್ಲಿ ದೈವದ ಕುರುಹು ಪತ್ತೆ ಆಗಿದೆ. ಪ್ರಶ್ನಾ ಚಿಂತನೆಯಲ್ಲಿ ನಾಗರಾಧನೆಯ ಸುಳಿವು ಸಿಕ್ಕಿತ್ತು. ಹೀಗಾಗಿ ಏಯ್ಯಾಡಿಯ ಪೊದೆಗಳಿಂದ ಆವರಿಸಿದ್ದ ಜಾಗ ಪ್ರಶ್ನಾ ಚಿಂತನೆಯಲ್ಲಿ ಪತ್ತೆಯಾಗಿತ್ತು. ಆ ಜಾಗದಲ್ಲಿ ದೀಪ ಹಚ್ಚುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಯಿತು. ಸೂಚನೆಯಂತೆ ನಾಗನ ಹುತ್ತದ ಬಳಿ ಗ್ರಾಮದ ಜನರು ದೀಪ ಹಚ್ಚುತ್ತಿದ್ದರು. ಇಷ್ಟೆಲ್ಲ ಆದರೂ ಜನರಿಗೆ ಮತ್ತೆ ಮತ್ತೆ ಗೆಜ್ಜೆಯ ಸದ್ದು ಕೇಳಿ ಬರುತ್ತಿತ್ತಂತೆ.

ಅದೇ ಜಾಗದ ಮರವೊಂದರ ಬುಡದ ಬಳಿ ಆ ಗೆಜ್ಜೆ ಸದ್ದು ಕೊನೆಯಾಗ್ತಿತ್ತಂತೆ. ಈ ವೇಳೆ ಮತ್ತೆ ಪ್ರಶ್ನಾ ಚಿಂತನೆ ಹಾಕಿದಾಗ ರಕ್ತೇಶ್ವರಿ ದೈವದ ಇರುವಿಕೆ ಪತ್ತೆಯಾಗಿದೆ. ಮರದ ಬುಡದಲ್ಲೇ ರಕ್ತೇಶ್ವರಿ ದೈವ ನೆಲೆ ನಿಂತಿರೋದು ಚಿಂತನೆಯಲ್ಲಿ ಗೋಚರವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಬೆಳಕಿನ ದರ್ಶನದ ದೈವದ ಪವಾಡದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈಗಲೂ ಮರದ ಬುಡದಲ್ಲೇ ರಕ್ತೇಶ್ವರಿ ದೈವದ ಪ್ರಖರ ಬೆಳಕು, ಗೆಜ್ಜೆ ಸದ್ದು ಅಂತ್ಯವಾಗ್ತಿದೆ. ರಕ್ತೇಶ್ವರಿ ದೈವದ ಪವಾಡ ಇಡೀ ಗ್ರಾಮದ ಜನರ ಅನುಭವಕ್ಕೆ ಬಂದಿದೆ. ಸದ್ಯ ಮರದ ಬುಡದಲ್ಲೇ ದೀಪ ಹಚ್ಚಿ ರಕ್ತೇಶ್ವರಿ ದೈವದ ಆರಾಧನೆ ಮಾಡಲಾಗುತ್ತಿದೆ.

You cannot copy content from Baravanige News

Scroll to Top