ತುಳುನಾಡ ದೈವಗಳಿಗೆ ಅವಮಾನಿಸುವವರ ವಿರುದ್ಧ ಅಟ್ರಾಸಿಟಿ ಕೇಸ್

ತುಳುನಾಡಿನ ದೈವಗಳಿಗೆ‌ ಭಾರೀ ಅವಮಾನವಾಗುತ್ತಿದೆ. ಮನರಂಜನೆಗಾಗಿ ದೈವಾರಾಧನೆ ಬಳಕೆ ಮಾಡಲಾಗುತ್ತಿದೆ ಎಂದು ತುಳುನಾಡಿನ ದೈವ ಪಾತ್ರಿಗಳು ಮತ್ತು ದೈವಾರಾಧಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ತುಳುನಾಡಿನ ದೈವಗಳಂತೆ ವೇಷತೊಟ್ಟು ಅಪಮಾನ ಮಾಡಲಾಗುತ್ತಿದೆ. ಹಣ ಸಂಪಾದನೆಗೆ ದೈವಗಳ‌ ವೇಷ ತೊಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ದಂಧೆ ಶುರುವಾಗಿದೆ ಎಂದು ತುಳುನಾಡ ದೈವ‌ ಪಾತ್ರಿ ದಯಾನಂದ ಕತ್ತಲ್ಸಾರ್ ಆರೋಪಿಸಿದ್ದಾರೆ.

ಏನಿದು ಆರೋಪ?

ಮನರಂಜನೆಗಾಗಿ ತುಳುನಾಡಿನ ದೈವಾರಾಧನೆ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ತುಳುನಾಡ ದೈವಗಳ ವೇಷಹಾಕಿ ಅಶ್ಲೀಲ‌ ನೃತ್ಯ ಮಾಡಲಾಗುತ್ತಿದೆ. ಭೂತ ಬಿಡಿಸಲು ತುಳುನಾಡ ದೈವಗಳಂತೆ ವೇಷತೊಟ್ಟು ನರ್ತನ ಮಾಡಲಾಗುತ್ತಿದೆ. ಕೆಲವು ಕಿಡಿಗೇಡಿಗಳು ಹಣ ಸಂಪಾದನೆಗೆ ದೈವಗಳ‌ ವೇಷತೊಡುತ್ತಿದ್ದಾರೆ. ಇದರಿಂದ ಪಂಬದ, ಪರವ, ನಲಿಕೆ ಸಮುದಾಯದವರಿಗೆ ಅವಮಾನವಾಗುತ್ತಿದೆ ಎಂದು ದೈವ ಪಾತ್ರಿಗಳು ದಯಾನಂದ ಕತ್ತಲ್ಸಾರ್ ಹೇಳಿದ್ದಾರೆ.

ಇನ್ನು ದೈವಗಳಿಗೆ ಅವಮಾನಿಸುವವರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುವುದಾಗಿಯೂ ದಯಾನಂದ ಕತ್ತಲ್ಸಾರ್ ಎಚ್ಚರಿಕೆ ಹಾಕಿದ್ದಾರೆ. ಜೊತೆಗೆ ಅಪಚಾರದ ಬಗ್ಗೆ ಧ್ವನಿ ಎತ್ತುವಂತೆ ನಟ ರಿಷಭ್ ಶೆಟ್ಟಿಗೆ ಒತ್ತಾಯ ಹೇರಿದ್ದಾರೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೂ ಆಗ್ರಹಿಸಿದ್ದಾರೆ. ಕ್ರಮಕೈಗೊಳ್ಳದಿದ್ದರೆ ದೈವಾರಾಧಕರಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ವರಿಕೆಯನ್ನು ರವಾನಿಸಿದ್ದಾರೆ.

Scroll to Top