8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ

ಹಾಸನ,ಡಿ.04: ಮೈಸೂರು ದಸರಾದ ಶೋ ಸ್ಟಾಪರ್ , ಎಂಟು ಬಾರಿ ಅಂಬಾರಿ ಹೊತ್ತು ಜನರ ಪ್ರೀತಿಗೆ ಪಾತ್ರವಾಗಿದ್ದ ಅರ್ಜುನ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾನೆ.

2012ರಿಂದ 2019 ರವರೆಗೆ ಮೈಸೂರು ದಸರಾದಲ್ಲಿ ಅರ್ಜುನ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತು ಜನರ ಮನಗೆದ್ದಿತು. ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿಗೆ ಉಸಿರು ಚೆಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಕಡೆಗಳಲ್ಲಿ ಕಾಡಾನೆಗಳು ನಾಡಿಗೆ ದಾಳಿ ಇಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.ಇತ್ತ ಹಾಸನದಲ್ಲೂ ಕೂಡ ಕಾಡಾನೆ ದಾಳಿಯ ಪ್ರಕರಣಗಳು ವರದಿಯಾಗಿತ್ತು.
ಈ ನಿಟ್ಟಿನಲ್ಲಿ ನಾಲ್ಕು ಸಾಕಾನೆಗಳನ್ನು ಬಳಸಿ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರು.ಈ ವೇಳೆ ಸಾಕಾನೆಗಳು ಹಾಗೂ ಕಾಡಾನೆ ಮಧ್ಯೆ ಕಾಳಗ ನಡೆದಿದೆ.ಇದೇ ವೇಳೆ ಇತರ ಸಾಕಾನೆಗಳು ಓಡಿಹೋದರೆ, ಅರ್ಜುನ ಮಾತ್ರ ಒಂಟಿಸಲಗದ ಜತೆ ಸೆಣಸಾಡಿತ್ತು.
ಈ ಎರಡು ಆನೆಗಳು ನಡುವೆ ಕಾದಾಟ ನಡೆಯುವಾಗ ಅರ್ಜುನನ ಮಾವುತರು ಮೇಲಿನಿಂದ ಇಳಿದು ಓಡಿದ್ದಾರೆ.ಇದಾದ ಬಳಿಕ ನಡೆದ ಭೀಕರ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು,ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ದಾಳಿ ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದಗೆಡಿಸಿತ್ತು. ಹೀಗಾಗಿ ಇದರ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಮೇಲೆ ಗಮನ ಇಡುವ ಕೆಲಸವನ್ನೂ ಅರಣ್ಯ ಇಲಾಖೆ ಮಾಡುತ್ತಿದೆ.ಕಳೆದ ಗುರುವಾರವಷ್ಟೇ ಇಲ್ಲಿನ ಬೇಲೂರು ತಾಲ್ಲೂಕಿನ ಅರೇಹಳ್ಳಿ ಬಳಿಯ ಅಣ್ಣಾಮಲೈ ಎಸ್ಟೇಟ್ ಹಾಗು ಕೆಲವು ದಿನಗಳ ಹಿಂದಷ್ಟೇ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಳಲು ಗ್ರಾಮದಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು.

Scroll to Top