ಲೋಕಾಯುಕ್ತ ದಾಳಿ : ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ

ಕುಂದಾಪುರ : ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುತ್ತಿದ್ದ ಸಿಬಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಚೇರಿಯಲ್ಲಿ ಲಿಪಿಕ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜು ಪೂಜಾರಿ ನಾಗರಿಕರೊಬ್ಬರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆದಿದೆ.

407 ವಾಹನವೊಂದು ಅರಣ್ಯ ಇಲಾಖೆಯಿಂದ ಮುಟ್ಟುಗೋಲಾಗಿದ್ದು, ಅದನ್ನು ಬಿಡಿಸುವ ಸಂಬಂಧ ಕಡತವನ್ನು ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಲು ಮಂಜು ಪೂಜಾರಿ ಲಂಚದ ಬೇಡಿಕೆಯಿಟ್ಟಿದ್ದರು. ಮಾತುಕತೆ ಪ್ರಕಾರ ಕಚೇರಿ ವೇಳೆಯಲ್ಲಿ ಲಂಚ ಪಡೆಯುತ್ತಿದ್ದಾಗಲೇ ದಾಳಿ ನಡೆದಿದೆ.

ನಗದು ಸಹಿತ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಲೋಕಾಯುಕ್ತ ಮಂಗಳೂರು ಎಸ್‌ಪಿ ಸೈಮನ್‌, ಡಿವೈಎಸ್‌ಪಿ ಪ್ರಕಾಶ್‌ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹಾಗೂ ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Scroll to Top