ಉಡುಪಿ: ಚಿನ್ನಾಭರಣ ಕಳವು ಪ್ರಕರಣ – ಅಂತರ್‌ ಜಿಲ್ಲಾ ಮನೆಗಳ್ಳನ ಬಂಧನ

ಉಡುಪಿ, ನ 29: ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ನಡೆಸಿ ಚಿನ್ನಾಭರಣ ಕಳವು ನಡೆಸಿದ ಅಂತರ್ ಜಿಲ್ಲಾ ಮನೆಗಳ್ಳ ತೌಸೀಫ್ ಅಹಮದ್ ಮಲ್ಲಾರ್ ಎಂಬಾತನನ್ನು ಉಡುಪಿ ನಗರ ಠಾಣಾ ಪೋಲಿಸರು ಬಂಧಿಸಿದ್ದಾರೆ.

ಜೂನ್ 30, 2023 ರಂದು ಶ್ರೀಮತಿ(48) ಬಡಗುಬೆಟ್ಟು ಗ್ರಾಮ ಇವರು ನೀಡಿದ ದೂರಿನಂತೆ ಜೂನ್ 30ರಂದು ಹಗಲು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ, ಮಲಗುವ ಕೋಣೆಯ ಗೋದ್ರೇಜ್‌ನ ಲಾಕರಿನಲ್ಲಿಟ್ಟಿದ್ದ ಅಂದಾಜು 5 ಪವನ್‌ ತೂಕದ ಚಿನ್ನದ ಕರಿಮಣಿ ಸರ-1, ಅಂದಾಜು 2 ಪವನ್‌ ತೂಕದ ಚಿನ್ನದ ಚೈನ್‌-1, ಅಂದಾಜು 1 1/2 ಪವನ್‌ ತೂಕದ ಚಿನ್ನದ ಸಣ್ಣ ನೆಕ್ಲೇಸ್‌-1, ಅಂದಾಜು ಒಟ್ಟು 2 ಪವನ್‌ ತೂಕದ ಚಿನ್ನದ ಉಂಗುರಗಳು-4, ಅಂದಾಜು 3/4 ಪವನ್‌ ತೂಕದ ಚಿನ್ನದ ಜುಮುಕಿ+ಬೆಂಡೋಲೆ- 1 ಜೊತೆ ಹಾಗೂ ನಗದು ರೂ. 15,500 , ಅಂದಾಜು 4 ಪವನ್‌ ತೂಕದ ಚಿನ್ನದ ನೆಕ್ಲೇಸ್‌-1, ಅಂದಾಜು 3 ಪವನ್‌ ತೂಕದ ಒಂದು ಜೊತೆ ಚಿನ್ನದ ಬಳೆ, 2 ಪವನ್‌ ತೂಕದ ಒಂದು ಜೊತೆ ಚಿನ್ನದ ಬಳೆ, 3/4 ಪವನ್‌ ತೂಕದ ಚಿನ್ನದ ಒಂದು ಜೊತೆ ಲೋಲಕ+ಬೆಂಡೋಲೆ, 1/2 ಪವನ್‌ ತೂಕದ ಚಿನ್ನದ ಉಂಗುರ-1, ಒಟ್ಟು 2 ಪವನ್‌ ತೂಕದ ಚಿನ್ನದ ಕಿವಿಯೋಲೆ -4 ಜೊತೆ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣಗಳ ಅಂದಾಜು ಒಟ್ಟು ತೂಕ 188 ಗ್ರಾಂ ಆಗಿದ್ದು, ಮೌಲ್ಯ 8,46,000 ರೂಪಾಯಿ ಹಾಗೂ ಕಳವಾದ ನಗದು ಹಣ 15,500 ರೂಪಾಯಿ ಸೇರಿ ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 8, 61, 500 ರೂಪಾಯಿ ಆಗಬಹುದು ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆ ಬಗ್ಗೆ ಉಡುಪಿ ನಗರ ಠಾಣಾ ಪೊಲೀಸ್‌ ನಿರೀಕ್ಷಕ ಮಂಜಪ್ಪ ಡಿ.ಆರ್‌., ಪಿಎಸ್‌ಐ ಈರಣ್ಣ ಶಿರಗುಂಪಿ, ಭರತೇಶ್‌ ಕಂಕಣವಾಡಿ, ಪುನೀತ್‌ ಕುಮಾರ್‌ ಮತ್ತು ಸಿಬ್ಬಂದಿಯವರಾದ ಸತೀಶ್‌ ಬೆಳ್ಳೆ, ಚೇತನ್‌, ಆನಂದ, ಎಸ್.ಶಿವಕುಮಾರ್‌ ರಿಯಾಜ್‌ ಅಹಮದ್‌, ವಿಶ್ವನಾಥ ಶೆಟ್ಟಿ,‌ ಕಿರಣ್‌, ಹೇಮಂತ್‌ ಕುಮಾರ್‌, ಓಬಳೇಶ್‌, ರಾಜೇಂದ್ರರವರ ನ್ನೊಳಗೊಂಡ ತಂಡವು ನವೆಂಬರ್ 28ರಂದು ಪ್ರಕರಣದ ಆರೋಪಿಯಾದ ತೌಸಿಪ್‌ ಅಹಮದ್‌(34) ಎಂಬಾತನನ್ನು ಮಲ್ಲಾರ್‌ನಲ್ಲಿ ವಶಕ್ಕೆ ಪಡೆದು, ಆತ ಕಳವು ಮಾಡಿದ್ದ ಒಟ್ಟು ರೂ 9,00,500 ಮೌಲ್ಯದ 155 ಗ್ರಾಂ ತೂಕದ ಬಂಗಾರದ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ದಸ್ತಗಿರಿಯಾದ ತೌಸಿಪ್‌ ಅಹಮದ್‌ ಈತನ ವಿರುದ್ಧ ಈಗಾಗಲೇ ಬಂಟ್ವಾಳ, ಪಣಂಬೂರು, ಬಜಪೆ ಕಡೆಗಳಲ್ಲಿ ಹಗಲು ಮನೆಗಳ್ಳತನ ಪ್ರಕರಣಗಳು ದಾಖಲಾಗಿದೆ.

Scroll to Top